13 January 2026

ಒಂದು ಕಥೆ ಹೇಗಿರಬೇಕು? ಹೋಟೆಲಿನಲ್ಲಿ ಸುಮ್ಮನೆ ಕುಳಿತು ಆರ್ಡರ್ ಮಾಡಿದಾಗ ಸಿಗುವ ಸಿದ್ಧಪಡಿಸಿಟ್ಟಿದ್ದ ಊಟದಂತೆಯೇ? ಅಥವಾ ಪರಿಕರಗಳನ್ನೆಲ್ಲ ನಮ್ಮ ಮುಂದಿರಿಸಿ ನಮಗಿಷ್ಟವಾದದ್ದನ್ನು ತಯಾರಿಸುವ ಸ್ವಾತಂತ್ರ್ಯ ಕೊಡುವ, ಅಡುಗೆಯನ್ನು ತಯಾರಿಸುವಾಗ ಸಕ್ರಿಯವಾಗಿ ಭಾಗವಹಿಸಿ, ಉಪ್ಪು, ಹುಳಿ, ಖಾರವನ್ನು ನಮ್ಮ ರುಚಿಗೆ ತಕ್ಕಂತೆ ಬೆರೆಸಿ, ಎಲ್ಲರೊಂದಿಗೆ ಕುಳಿತು ಚಪ್ಪರಿಸಿಕೊಳ್ಳುವ ನಮ್ಮ ಮನೆಯದ್ದೇ ಊಟದಂತಿರಬೇಕೇ?
ಉದ್ದೇಶ ಬರಿ ಹಸಿವೆಯನ್ನು ನೀಗಿಸಿಕೊಳ್ಳುವುದು ಮಾತ್ರವಾಗಿದ್ದರೆ, ಸಿದ್ಧ ಊಟ ಒಳ್ಳೆಯ ಆಯ್ಕೆ. ಆದರೆ ಹಸಿವೆಯನ್ನು ನೀಗಿಸಿಕೊಳ್ಳುವುದರ ಜೊತೆಗೆ, ನಾಲಿಗೆಯ ಎಲ್ಲಾ ರುಚಿ ರಂಧ್ರಗಳ ಚಪಲಗಳನ್ನು ತೀರಿಸಿ, ಅಡುಗೆಯ ಸೂಕ್ಷ್ಮಗಳನ್ನು ಕೂಡ ಹದವಾಗಿ ಅರಿತುಕೊಳ್ಳುವುದು ನಿಮ್ಮ ಬಯಕೆಯಾಗಿದ್ದರೆ ಎರಡನೇ ಆಯ್ಕೆ ನಿಮ್ಮದಾಗಬೇಕು.

ಹಾಗೆಯೇ ಒಂದು ಉತ್ತಮ ಕಥೆ ಅಥವಾ ಚಿತ್ರದ ಲಕ್ಷಣವಾಗಿರಬೇಕು. ನನ್ನ ಬಳಿ ೩ ಗಂಟೆಯಿದೆ, ಕಳೆಯುವುದು ಹೇಗೆ ಎಂದು ಗೊತ್ತಿಲ್ಲ, ಆ ೩ ಗಂಟೆಗಳಲ್ಲಿ ಬರಿ ಮನೋರಂಜನೆ ಪಡೆದುಕೊಳ್ಳುವುದು ಮಾತ್ರ ನನ್ನ ಉದ್ದೇಶವೆಂದರೆ, ಈಗಾಗಲೇ ಸಿನೆಮಾ ಕ್ಷೇತ್ರದಲ್ಲಿ ದಿನಕ್ಕೆ ೪ ರ ಹಾಗೆ ಬಿಡುಗಡೆಯಾಗುವ ಅನೇಕ ಚಿತ್ರಗಳಿರುತ್ತದೆ. ಅಲ್ಲಿ ಹುಡುಗ ಹುಡುಗಿಯ ಮಧ್ಯೆ ಅಂಕುರಿಸುವ ಪ್ರೀತಿಯಿದೆ, ಅಮ್ಮ ಮಗನ ಮಧ್ಯೆ ಅಪರಿಮಿತ ವಾತ್ಸಲ್ಯವಿದೆ, ಉಲ್ಲಾಸದಿಂದ ಹಾಡುವ ಹಾಡುಗಳಿವೆ, ಉತ್ಸಾಹದಿಂದ ಮಾಡುವ ಕುಣಿತವಿದೆ, ದುಷ್ಟರನ್ನು ವಿಧ ವಿಧವಾಗಿ ಕ್ರೂರ ರೀತಿಯಲ್ಲಿ ಶಿಕ್ಷಿಸುವ ವಿಧಾನಗಳಿವೆ. ಆದರೆ ಎಲ್ಲವು ಸಾಮಾನ್ಯ ನಿಜ ಜೀವನಕ್ಕೆ ಹೋಲಿಕೆಯೇ ಇಲ್ಲದಂತೆ ಅತಿಯಾಗಿದೆ. ಚಪ್ಪಾಳೆ, ಶಿಳ್ಳೆಗಳು ಸರಿ. ಆದರೆ ಮನೆಗೆ ಬಂದ ೨ ದಿನದ ನಂತರವೂ ಕಥೆ ಕಾಡುತ್ತದೆಯೇ?

ನಿರಾಶಾದಾಯಕ ವಿಚಾರವೆಂದರೆ ನಾವು ಅಭಿರುಚಿಗಳನ್ನು ಬೆಳೆಸಿಕೊಳ್ಳುವಲ್ಲಾಗಲಿ, ಒಂದು ಚಿತ್ರದ ಕಥೆಯ, ಕಲೆಯ, ಪಾತ್ರದ, ಅಭಿನಯದ ವೈಚಾರಿಕ ವಿಮರ್ಶೆ ಮಾಡುವ ವಿಚಾರದಲ್ಲಾಗಲಿ, ಕಥೆಗಳ ಮೂಲಕ ನಮ್ಮ ಯೋಚನಾ ಕ್ರಿಯೆಯ ಆಳಕ್ಕೆ ಇಳಿದು, ನಮ್ಮನ್ನು, ನಮ್ಮ ಸುತ್ತದವರನ್ನು, ಸಮಾಜವನ್ನು ಆಳವಾಗಿ ತಿಳಿಯುವ ಆಸಕ್ತಿಯನಾಗಲೀ ಇಟ್ಟುಕೊಂಡಂತಿಲ್ಲ. ಇಲ್ಲವೆಂದಲ್ಲಿ ಏಕಂ ಎಂಬ ಅತ್ತ್ಯುತ್ತಮವಾದ, ಕನ್ನಡದಲ್ಲೇ ಮೊದಲ ಪ್ರಯತ್ನವೆಂಬಂತ ಒಂದು ಉತ್ತಮ ಪ್ರಯತ್ನವನ್ನು ಹೀಗೆ ಸಾರಾಸಗಟಾಗಿ ನಿರಾಕರಿಸುತ್ತಿರಲಿಲ್ಲ. ಎಲ್ಲ OTT ಪ್ಲಾಟ್ಫಾರ್ಮ್ಸ್ ನಿರಾಕರಿಸಿದ ಬೇಜಾರಲ್ಲಿ ನಿರ್ಮಾಪಕರು ತಮ್ಮದೇ ಸ್ವಂತ ವೇದಿಕೆಯಲ್ಲಿ ಅದನ್ನು ಬಿಡುಗಡೆ ಮಾಡುವ ಪ್ರಸಂಗ ಬರುತ್ತಿರಲಿಲ್ಲ.

—–
ಏಕಂ ಎನ್ನುವುದು ೭ ಕಥೆಗಳ ಸಂಕಲನ. ಎಲ್ಲಾ ಕಥೆಗಳೂ, ದೇವರ ಮನೆಯಲ್ಲಿ ನಿಧಾನಕ್ಕೆ ಉರಿಯುವ ದೀಪದಂತೆ ಉರಿದು ಅರಿವಿಗೆ ಬೆಳಕು ಮೂಡಿಸುವ ಪ್ರಯತ್ನವನ್ನು ಮಾಡುತ್ತವೆ.

ನನಗೆ ಇದರಲ್ಲಿ ಅತಿಯಾಗಿ ಮನಮುಟ್ಟಿದ ಕಥೆ ‘ಶೂನ್ಯ’ .
ಆತನ ಹೆಸರು ಗುರುವ. ತುಳು ಆತನ ಆಡುಭಾಷೆ. ಬಹುಶ ಬೇರೆ ಭಾಷೆ ಕಲಿಯುವ ಅವಶ್ಯಕತೆ ಆತನಿಗೆ ಎಂದೂ ಬಂದಿರಲಿಲ್ಲವೇನೋ. ಬದುಕುತ್ತಿರುವ ಪರಿಸರದ ಕಾಡೇ ಆತನ ಪ್ರಪಂಚ. ಸುಮಾರು ೭೫ ಗಡಿ ದಾಟಿರುವ ಗುರುವನಿಗೆ, ತನ್ನ ಪ್ರಪಂಚದಲ್ಲಿ ಅಂತಹ ಕುಂದು ಕೊರತೆಗಳೇನು ಇಲ್ಲಿಯ ತನಕ ಗೋಚರಿಸಿದಂತಿಲ್ಲ.
ಕಾಡಿನ ಅನೂಹ್ಯವಾದ ಲೋಕ ಆತನ ನರ ನಾಡಿಗಳಲ್ಲಿ ಹಾಸುಹೊಕ್ಕಂತಿದೆ. ಹಾಗೆಯೇ ತಾನು ಕೂಡ ವಿಶಾಲವಾದ ಕಾಡಿನ ಒಂದು ಭಾಗವೆಂದೇ ಆತನ ನಂಬಿಕೆ. ಕಾಡು, ಪರಿಸರ, ಪ್ರಾಣಿಗಳು, ಪಕ್ಷಿಗಳು ಹಾಗು ತಾನು, ಎಲ್ಲವೂ ಪ್ರಕೃತಿಯ ಭಾಗವೆಂದೇ ತಿಳಿದು ಇಲ್ಲಿಯವರೆಗೆ ಬದುಕು ಸವೆಸಿದವ. ಕಾಡಿನ ಸ್ವರಗಳನ್ನು ಕೇಳಿ, ಕೀಟಗಳ ವರ್ತನೆಗಳನ್ನು ನೋಡಿ, ನೆಲವನ್ನು ಸ್ಪರ್ಶಿಸಿ ಕಾಡಿನ ಸ್ಪಂದನವನ್ನು ತಿಳಿದು, ತನ್ನಅವಶ್ಯಕತೆಗೆ ಬೇಕಾದಷ್ಟನ್ನೇ ಪೃಕೃತಿಯ ಸಂಪನ್ಮೂಲಗಳನ್ನು ಬಳಸಿಕೊಳ್ಳಬಲ್ಲ ಹೊಣೆಯುಳ್ಳವ. ತನ್ನದೇ ತುಂಬಾ ಸರಳವಾದ ಜಾಲವನ್ನು ಬೀಸಿ ದಿನದ ಊಟಕ್ಕಾಗುವಷ್ಟು ಬೇಟೆಯಾಡಿ ಸರಳ ಜೀವನ ಸಾಗಿಸಿ ತಕ್ಕ ಮಟ್ಟಿಗೆ ತೃಪ್ತಿಯಿಂದಲೇ ಇದ್ದವ .
ಇಂತಹದ್ದರಲ್ಲಿ ಒಂದು ದಿನ ಪಕ್ಕದೂರಿನ ಶ್ರೀಮಂತ ಮನೆಯವರ ಹುಡುಗರು ಹಂದಿಯನ್ನು ಬೇಟೆಯಾಡಲು ಈತನ ಸೂಚನೆ ಸಲಹೆಗಳನ್ನು ಪಡೆಯಬರುತ್ತಾರೆ. ಬೇಟೆ ಮಾಡುವ ಆಸೆಯಿಂದ ಗುರುವ ತಾನು ಕೂಡ ಅವರನ್ನು ಸೇರಬಹುದೇ ಎಂದು ಸಹಜವಾಗಿ ಕೇಳಿದಾಗ, ಬಂದ ಹುಡುಗರು ಆತನನ್ನು ಹೀಯಾಳಿಸುವಂತೆ, ಕೋವಿ ಮುಟ್ಟಿ ಗೊತ್ತಿಲ್ಲದ ನೀನ್ಯಾವ ಸೀಮೆ ಬೇಟೆಗಾರ ಎಂದು ಕಡೆಗಣಿಸಿ ಹೋಗುತ್ತಾರೆ.
ಸ್ವಲ್ಪವೇ ದಿನಗಳಲ್ಲಿ ಗುರುವ ಯಾವ ಧಣಿಗಳ ಜಾಗದಲ್ಲಿ ಗೇಣಿ ಮಾಡಿಕೊಂಡಿದ್ದನೋ, ಅದೇ ಧಣಿ ಆತನನ್ನು ತಾವಿರುವ ಪೇಟೆಗೆ ಕರೆಯಿಸಿಕೊಂಡು ತಮ್ಮ ಹೊಲಗಳನ್ನು ಹಂದಿಯಿಂದ ಹಾಗು ತಮ್ಮ ಪಾಲಿನ ಕಾಡನ್ನು ಕಳ್ಳರಿಂದ ಕಾಪಾಡಲು ಗುರುವನಿಗೆ ಯಾವುದೋ ಒಂದು ಹಳೆಯ ಕೋವಿಯನ್ನು ಒತ್ತಾಯ ಮಾಡಿ ಕೊಡುತ್ತಾರೆ. ಸ್ವಲ್ಪ ಕಳವಳ, ಸ್ವಲ್ಪ ತವಕ, ಮತ್ತೊಂದಿಷ್ಟು ಉತ್ಸುಕತೆಯಿಂದಲೇ ಒಪ್ಪಿಕೊಂಡು ಗುರುವ ಖುಷಿ ಖುಷಿಯಿಂದ ವಾಪಸಾಗುತ್ತಾನೆ. ಬಸ್ಸಿನಲ್ಲಿ ಗುರುವನಿಗೆ ತಾನು ಆಗಲೇ ಕೋವಿ ಹಿಡಿದ ಮಹಾ ಬೇಟೆಗಾರನಾದ ಕನಸು.
ಅಲ್ಲಿಂದ್ ಶುರುವಾಗುತ್ತದೆ ಆತನ ನೆಮ್ಮದಿಯ ನಿಧಾನವಾದ ಅವನತಿ.
ಪ್ರತಿದಿನ ಕೋವಿ ಹಿಡಿದುಕೊಂಡು ಆಗಲೇ ಹಂದಿ ಕಾಟದಿಂದ ಹಾಳಾಗಿರುವ ಗದ್ದೆ ಕಾಯುತ್ತಾನೆ. ಕೋವಿಗೆ ಏನೂ ಆಗದಂತೆ ತನ್ನ ಹೆಗಲಿಗೆ ಅಂಟಿಸಿಕೊಂಡೆ ತಿರುಗಾಡುತ್ತಾನೆ. ನೋಡ ನೋಡುತ್ತಾ ಕೋವಿಯೊಂದಿಗೆ ತನ್ನನ್ನು ಕಲ್ಪಿಸಿಕೊಳ್ಳುತ್ತಾ, ಕಲ್ಪನೆಯಲ್ಲೇ ತನ್ನ ಸ್ಥಾನಮಾನಗಳನ್ನು ಮಹಾ ಬೇಟೆಗಾರನೆಂದು ಏರಿಸಿಕೊಳ್ಳುತ್ತಾನೆ.
ಇನ್ನೊಂದೆಡೆ ಕೋವಿ ಸಂಭಾಳಿಸುವ ಗೋಜಿನಲ್ಲಿ ಆತನ ದಿನ ಬೇಟೆ ನಿಂತು ಹೋಗಿದೆ. ದಿನ ಸಂಜೆ ಬರಿ ಕೈಯಲ್ಲಿ ಮನೆ ಮರುಳತೊಡಗಿದ್ದಾನೆ. ಇಷ್ಟವಿಲ್ಲದೆ ಮನೆ ಮಂದಿ, ಒಮ್ಮೆ ಸಸ್ಯಹಾರವನ್ನು ಇನ್ನೊಮ್ಮೆ ಫಾರ್ಮ್ ಕೋಳಿಯನ್ನು ಊಟಕ್ಕೆ ತಿಂದು ಮನಸ್ಸಿನಲ್ಲೇ ಗುರುವನ ಬದಲಾದ ನಡವಳಿಕೆಗೆ ಶಪಿಸಿ ಮಲಗತೊಡಗಿದ್ದರೆ.